ಚೆನ್ನೈ: ಚೆಸ್ ನಲ್ಲಿ ವಿಶ್ವ ಚಾಂಪಿಯನ್ ಆಗಿರುವ ಡಿ. ಗುಕೇಶ್ ಗೆ ಚಿತ್ರರಂಗದ ಗಣ್ಯರು ಅಭಿನಂದಿಸಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಶಿವಕಾರ್ತಿಕೇಯನ್ ರನ್ನು ಗುಕೇಶ್ ಭೇಟಿಯಾಗಿದ್ದಾರೆ.
ಗುಕೇಶ್ ಅವರಿಂದಾಗಿ ಭಾರತಕ್ಕೆ 11 ವರ್ಷಗಳ ಬಳಿಕ ಚೆಸ್ ಚಾಂಪಿಯನ್ಶಿಪ್ ದೊರೆತಿದೆ. ಈ ಹಿನ್ನೆಲೆಯಲ್ಲಿ ಗುಕೇಶ್ಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ಗುರುವಾರ ರಜನಿಕಾಂತ್ ನಿವಾಸಕ್ಕೆ ಗುಕೇಶ್ ತನ್ನ ಪೋಷಕರ ಜತೆ ಭೇಟಿ ನೀಡಿದ್ದರು. ಈ ವೇಳೆ ರಜನಿಕಾಂತ್ ಅವರು ಗುಕೇಶ್ಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಅಲ್ಲದೇ, ಪುಸ್ತಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಗುಕೇಶ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮನ್ನು ಮನೆಗೆ ಆಹ್ವಾನಿಸಿ, ನಮ್ಮೊಂದಿಗೆ ಅಮೂಲ್ಯವಾದ ಸಮಯ ಕಳೆದು, ಜ್ಞಾನ ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್ ಎಂದು ತಿಳಿಸಿದ್ದಾರೆ.
ಇನ್ನು ಅಮರನ್ ಸಿನಿಮಾದ ಯಶಸ್ಸಿನಲ್ಲಿರುವ ನಟ ಶಿವಕಾರ್ತಿಕೇಯನ್ ಅವರು ಡಿ. ಗುಕೇಶ್ ಮತ್ತು ಅವರ ಕುಟುಂಬದವರ ಜೊತೆ ಕಾಲ ಕಳೆದಿದ್ದಾರೆ. ಚೆಸ್ ವಿನ್ಯಾಸ ಇರುವ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಗುಕೇಶ್ಗೆ ಅವರು ವಾಚ್ ಗಿಫ್ಟ್ ನೀಡಿದ್ದಾರೆ. ಈ ಫೋಟೋವನ್ನು ಕೂಡ ಗುಕೇಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿಪಟ್ಟಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್ ಆಗಿರುವ ಗುಕೇಶ್ ಅನೇಕ ಯುವಕರಿಗೆ ಮಾದರಿ ಆಗಿದ್ದಾರೆ ಎಂದು ಅಮಿತಾಭ್ ಬಚ್ಚನ್, ಮೋಹನ್ಲಾಲ್, ಮಹೇಶ್ ಬಾಬು, ಮುಂತಾದ ಸೆಲೆಬ್ರಿಟಿಗಳು ಕೂಡ ಯುವ ಚೆಸ್ ಆಟಗಾರನ ಸಾಧನೆಯನ್ನು ಕೊಂಡಾಡಿದ್ದಾರೆ.