ಕರ್ನಾಟಕ

ಕ್ರೈಂ ಸುದ್ದಿಲೋಕದ ಗಣೇಶಣ್ಣ ಅಸ್ತಂಗತ.. ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟ..!

ಕ್ರೈಂ ಗಣೇಶ್, ಗಣೇಶಣ್ಣ ಎಂದು ಎಲ್ಲರ ಬಾಯಲ್ಲಿ ನಲಿದಾಡುತ್ತಿದ್ದ ಹಿರಿಯ ಪತ್ರಕರ್ತ, ಗಣೇಶ್.ಜಿ ಅವರು ಇಹಲೋಕ ತ್ಯಜಿಸಿದ್ದು ಮಾಧ್ಯಮ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಇವರು ಕ್ರೈಂ ಸುದ್ದಿಲೋಕದ ಹಿರಿಯಣ್ಣ. ಎಲ್ಲರ ಪ್ರೀತಿಯ ಗಣೇಶಣ್ಣ.. ಕ್ರೈಂ ಗಣೇಶ್, ಗಣೇಶಣ್ಣ, ಕಸ್ತೂರಿ ಗಣೇಶ್ ಎಂಬ ಹೆಸರು ಕೇಳದವರಿಲ್ಲ. ಪತ್ರಿಕಾ ರಂಗಕ್ಕೆ ಅಪಾರ ಕೊಡುಗೆ ನೀಡಿದ ವ್ಯಕ್ತಿ. ಕ್ರೈಂ ಸುದ್ದಿಯಷ್ಟೇ ಅಲ್ಲ, ಎಂಥದ್ದೇ ಸುದ್ದಿಯಾದರೂ ಅದರ ಆಳ-ಅಗಲ ಹೆಕ್ಕಿ ತೆಗೆಯುವ ಚಾಣಾಕ್ಷರಾಗಿದ್ದ ಇವರು, ಯುವ ಪತ್ರಕರ್ತರಿಗೊಂದು ಸ್ಫೂರ್ತಿ. ಇಂದು ಇಡೀ ಮಾಧ್ಯಮ ಜಗತ್ತನ್ನೇ ತೊರೆದು ಇನ್ನೆಂದೂ ಬಾರದ ಲೋಕಕ್ಕೆ ತೆರಳಿದ್ದಾರೆ. ಇವರ ಅನುಪಸ್ಥಿತಿ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದರೆ ತಪ್ಪಾಗದು.

ಕಳೆದ 20 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿರುವ ಕ್ರೈಂ ಗಣೇಶ್ ಅವರು, ಅನಾರೋಗ್ಯದಿಂದ ಇಂದು ( ಅ.10) ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 

ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯ ಗಂಗಯ್ಯ ಮತ್ತು ಕೆಂಪಮ್ಮ ದಂಪತಿ ಪುತ್ರರಾಗಿದ್ದ ಗಣೇಶ್‌ ಅವರು, ಪತ್ನಿ ಪಾರ್ವತಮ್ಮ ಹಾಗೂ ಪುತ್ರನನ್ನು ಅಗಲಿದ್ದಾರೆ. ಇಂದು ಅವರ ಮೃತದೇಹವನ್ನು ತಾಳೆಕೆರೆಗೆ ಕೊಂಡೊಯ್ದು ಗುಡ್ಡೆ ರಂಗನಾಥಸ್ವಾಮಿ ಗುಡಿ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು. 

ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್‌ ಎಂದು ಪರಿಚಿತರಾಗಿದ್ದ ಗಣೇಶ್‌ ಅವರು, ಕ್ರೈಂ ವರದಿಗಾರಿಕೆಯಲ್ಲಿ ನಿಪುಣರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಇಂದು ಹಲವಾರು ಯುವ ಪತ್ರಕರ್ತರು ಯಶಸ್ವಿ ಪತ್ರಕರ್ತರಾಗಿ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಸ್ತೂರಿ, ನ್ಯೂಸ್‌‍ 18, ಪ್ರಜಾ ಟಿವಿಗಳಲ್ಲಿ ಸೇವೆ ಸಲ್ಲಿಸಿದ್ದ ಗಣೇಶ್‌ ಅವರು ಪ್ರಸ್ತುತ ಟಿವಿ5 ನಲ್ಲಿ ಔಟ್ ಪುಟ್ ಚೀಫ್‌ ಅಗಿ ಸೇವೆ ಸಲ್ಲಿಸುತ್ತಿದ್ದರು. ಗಣೇಶ್‌ ಅವರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಪ್ರೆಸ್‌‍ ಕ್ಲಬ್‌, ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟ ಕಂಬನಿ ಮಿಡಿದಿದೆ. ಅದೇ ರೀತಿ ಹಲವಾರು ಗಣ್ಯರು, ಹಿರಿಯ ಪೊಲೀಸ್‌‍ ಅಧಿಕಾರಿಗಳು ಗಣೇಶ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.