ಕರ್ನಾಟಕ

ದಾಸನ ದಾರಿಯಲ್ಲೇ ಡಿ ಬಾಸ್ ಫ್ಯಾನ್ಸ್.. ನಿನ್ನ ಕೊಲೆ ಮಾಡದೇ ಬಿಡಲ್ಲ ಅಂತಾ ಚಾಕು ಇರಿದ ಪಾಪಿಗಳು..!

ಡಿ ಬಾಸ್ ಬಗ್ಗೆ ನಿನಗೇನು ಗೊತ್ತು.. ನಿನ್ನ ಕೊಲೆ ಮಾಡದೇ ಬಿಡಲ್ಲ ಎಂದು ಅಭಿಮಾನಿಗಳು ಕುತ್ತಿಗೆಗೆ ಚಾಕು ಇರಿದಿದ್ದಾರೆ

ಡಿ ಬಾಸ್, ಡಿ ಬಾಸ್ ಅಂತಾ ಕೂಗಬೇಡಿ ಅಂದಿದ್ದಕ್ಕೆ, ಗಾರೆ ಕೆಲಸ ಮಾಡಿಕೊಂಡಿದ್ದ ಡಿ ಬಾಸ್ ಅಭಿಮಾನಿಗಳಿಬ್ಬರು ಮೇಸ್ತ್ರಿ ಕುತ್ತಿಗೆಗೆ ಚಾಕು ಇರಿದಿದ್ದಾರೆ. ಈ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿ ಸೂಲಿಕೆರೆ ಪಾಳ್ಯದ ಲೇಬರ್ ಶೆಡ್ ನಲ್ಲಿ ನಡೆದಿದೆ. ಸೆಪ್ಟೆಂಬರ್ 26ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಐಜೂರು ಬಡಾವಣೆ ನಿವಾಸಿಗಳಾದ ಕಿರಣ್, ಮಹದೇವ ಎಂಬುವರಿಂದ ದುಷ್ಕೃತ್ಯ ನಡೆದಿದ್ದು, ವೆಂಕಟಸ್ವಾಮಿ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಸುರೇಶ್ ಎಂಬುವರ ಗುತ್ತಿಗೆ ತೆಗೆದುಕೊಂಡಿದ್ದ ಜಾಗದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡು, ಕಿರಣ್ ಹಾಗೂ ಮಹದೇವ ಎಂಬುವರ ಜೊತೆ ಶೆಡ್ ನಲ್ಲಿ ವಾಸವಿದ್ದರು. ಸೆಪ್ಟೆಂಬರ್ 26ರಂದು ನಟ ದರ್ಶನ್ ವಿಚಾರವಾಗಿ ಡಿ ಬಾಸ್..ಡಿ ಬಾಸ್ ಎಂದು ಕೂಗಲಾರಂಭಿಸಿದರು. ಅಕ್ಕಪಕ್ಕದಲ್ಲಿ ಮನೆಗಳಿವೆ ಕೂಗಾಡಬೇಡಿ ಎಂದು ವೆಂಕಟಸ್ವಾಮಿ ಹೇಳಿದ್ದಾರೆ. ಆಗ ನಮ್ಮ ಡಿ ಬಾಸ್ ಬಗ್ಗೆ ನಿನಗೇನು ಗೊತ್ತು.. ನಿನ್ನ ಕೊಲೆ ಮಾಡದೇ ಬಿಡಲ್ಲ ಎಂದು ಅಭಿಮಾನಿಗಳು ಕುತ್ತಿಗೆಗೆ ಚಾಕು ಇರಿದಿದ್ದಾರೆ.