ರಾಮನಗರ : ಚನ್ನಪಟ್ಟಣ ಕ್ಷೇತ್ರದ ಅಸೆಂಬ್ಲಿ ಉಪಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನ ನಿಗದಿ ಮಾಡಿಲ್ಲ. ಆದರೂ , ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ಗಾಗಿ ಸಿ.ಪಿ ಯೋಗೆಶ್ವರ್ ಅವರ ಪ್ರಯತ್ನ ಮುಂದುವರೆದಿದೆ.
ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಚುನಾವಣೆಗೆ ದಿನ ಘೋಷಣೆಯಾಗಲಿ ಆಮೇಲೆ ನಿರ್ಧರಿಸೋಣ ಎಂದು ಪದೇಪದೆ ಹೇಳುತ್ತಿದ್ದರೂ, ಯೋಗೇಶ್ವರ್ ಅವರು ಟಿಕೆಟ್ಗಾಗಿ ಶತಪ್ರಯತ್ನವನ್ನ ಮಾಡುತ್ತಿದ್ದಾರೆ. ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮೊದಲ ಆಯ್ಕೆ ಎಂದಿರುವ ಯೋಗೇಶ್ವರ್, ಪಕ್ಷೇತರರಾಗಿ ಸ್ಪರ್ಧಿಸುವ ಎರಡನೇ ಆಯ್ಕೆಯನ್ನು ಇಟ್ಟುಕೊಂಡಿದ್ದಾರೆ.
ಚನ್ನಪಟ್ಟಣ ಕ್ಷೇತ್ರವು ಕುಮಾರಸ್ವಾಮಿ ಅವರ ತವರು ಕ್ಷೇತ್ರ ಜೊತೆಗೆ ಜೆಡಿಎಸ್ ಭದ್ರ ಬುನಾದಿ ಇರುವ ಕ್ಷೇತ್ರ, ಹಾಗಾಗಿ, ಕ್ಷೇತ್ರ ಬಿಟ್ಟು ಕೊಡದಿರಲು ಜೆಡಿಎಸ್ ಕೂಡಾ ನಿರ್ಧರಿಸಿದಂತಿದೆ. ಆದರೆ, ಸೈನಿಕ ಯೋಗೇಶ್ವರ್ ತೆಗೆದುಕೊಳ್ಳುವ ನಿರ್ಧಾರ, ಜೆಡಿಎಸ್ ಪಾಲಿಗೆ ನಿರ್ಣಾಯಕವಾಗಲಿದೆ.
ಪಕ್ಷೇತರರಾಗಿ ಸ್ಪರ್ಧಿಸುವ ಆಯ್ಕೆಯನ್ನು ಇಟ್ಟುಕೊಂಡಿರುವ ಯೋಗೇಶ್ವರ್, ಇದು ಒಂದು ವೇಳೆ ಪ್ರಬಲ ಹೋರಾಟ ನೀಡಲು ಕಷ್ಟ ಎನ್ನುವ ಚಿತ್ರಣ ಎದುರಾದರೆ, ಬಹುಜನ ಸಮಾಜ ಪಕ್ಷದ (Bahujan Samaj Party) ಟಿಕೆಟಿನಿಂದ ಸ್ಪರ್ಧಿಸುವ ಆಯ್ಕೆಯನ್ನೂ ಮುಕ್ತವಾಗಿ ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಧಾನ ಪರಿಷತ್ ಸದಸ್ಯರೂ ಆಗಿರುವ ಯೋಗೇಶ್ವರ್, ಚನ್ನಪಟ್ಟಣದಲ್ಲಿ ಭಗೀರಥ ಎನ್ನುವ ಹೆಸರನ್ನೂ ಹೊಂದಿದ್ದಾರೆ. ಐದು ಬಾರಿ ಕ್ಷೇತ್ರದ ಶಾಸಕರಾಗಿರುವ ಯೋಗೇಶ್ವರ್ ಒಮ್ಮೆ ಪಕ್ಷೇತರರಾಗಿ ಮತ್ತೊಮ್ಮೆ ಸಮಾಜವಾದಿ ಪಕ್ಷದ ಟಿಕೆಟಿನಿಂದಲೂ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಟಿಕೆಟ್ ಸಿಗದೆ ಇದ್ದೆರೆ, ಪಕ್ಷೇತರ ಅಭ್ಯರ್ಥಿಯಾಗಿ ಅಥವಾ BSP ಪಾರ್ಟಿಯಿಂದ ಸ್ಪರ್ಧಿಸುವ ಆಲೋಚನೆಯಂತು ಸಿ.ಪಿ ಯೋಗೇಶ್ವರ್ ಅವರಿಗಿದೆ