ಕಲ್ಪತರು ನಾಡು ತುಮಕೂರಿನಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ಹಿನ್ನೆಲೆ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ನಗರದಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 5ಗಂಟೆವರೆಗೂ ನಗರದಲ್ಲಿ ಯಾವುದೇ ವಾಹನಗಳು ಸಂಚರಿಸುವಂತಿಲ್ಲ.
ತುಮಕೂರಿನ BGS ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ಜಂಬೂಸವಾರಿ ಆರಂಭವಾಗಲಿದೆ. ಬಿಜಿಎಸ್ ವೃತ್ತದಿಂದ ಅಶೋಕ ರಸ್ತೆ, ಚರ್ಚ್ ವೃತ್ತ, ಡಿಸಿ ಕಚೇರಿ, ಅಮಾನಿಕರೆ, ಕೋತಿತೋಪು ರಸ್ತೆ, ಶಿವಕುಮಾರ್ ಸ್ವಾಮಿ ವೃತ್ತದ ಮೂಲಕ ಸರ್ಕಾರಿ ಜೂನಿಯರ್ ಕಾಲೇಜ್ ಮೈದಾನಕ್ಕೆ ಜಂಬೂಸವಾರಿ ಬರಲಿದೆ.
ತಮಕೂರಿನ ಲಕ್ಷ್ಮೀ ಆನೆ ಹಾಗೂ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಲಕ್ಷ್ಮೀ ಆನೆ ಸೇರಿ 2 ಆನೆಗಳು ಜೊತೆಗೆ ನೂರಕ್ಕೂ ಹೆಚ್ಚು ದೇವಾಲಯಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಜಂಬೂಸವಾರಿ ಜೊತೆ ಅಶ್ವಾರೋಹಿ ದಳ, ವಿಂಟೇಜ್ ಕಾರ್ ಹಾಗೂ ನೂರಾರು ಕಲಾತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಹೆಚ್ಎಎಲ್ ವತಿಯಿಂದ ಹೆಲಿಕಾಪ್ಟರ್ ಶೋ, ರಾತ್ರಿ 7 ಗಂಟೆಗೆ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಡ್ರೋಣ್ ಶೋ, ರಾತ್ರಿ 8 ಗಂಟೆಗೆ ಗ್ಯಾತ ಗಾಯಕ ವಿಜಯಪ್ರಕಾಶ್ ತಂಡದಿಂದ ಮನರಂಜನಾ ಕಾರ್ಯಕ್ರಮ ಇರಲಿದೆ.