ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಆಡಲು ತೆರಳಿದ್ದ ಶ್ರೀಲಂಕಾ ಎ ತಂಡ ಸರಣಿಯ ಮಧ್ಯದಲ್ಲಿಯೇ ಶ್ರೀಲಂಕಾಗೆ ವಾಪಸ್ಸಾಗಿದೆ. ಈ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿಯೇ ಆಯೋಜನೆಯಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬಿಸಿಸಿಐ ಜೊತೆ ಜಟಾಪಟಿಗಿಳಿದಿದ್ದು, ಭಾರತ ತಂಡ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪಾಕ್ಗೆ ಬರಬೇಕು ಎಂದು ಪಟ್ಟು ಹಿಡಿದಿದೆ. ಆದರೆ ಭದ್ರತೆಯ ದೃಷ್ಟಿಯಿಂದ ಭಾರತ ತಂಡ ಪಾಕ್ಗೆ ಬರೋದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದ್ದು ಏಕೆ ಅನ್ನೋದು ಈಗ ತಿಳಿಯುತ್ತಿದೆ. ಪಾಕಿಸ್ತಾನದಲ್ಲಿ ರಾಜಕೀಯ ಸಂಘರ್ಷ ಜೋರಾಗಿದ್ದು ಎಲ್ಲೆಡೆ ಹಿಂಸಾಚಾರ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿ ಆಡಲು ತೆರಳಿದ್ದ ಶ್ರೀಲಂಕಾ ಎ ತಂಡ ಪಾಕಿಸ್ತಾನದಿಂದ ವಾಪಸ್ ಬಂದಿದೆ.
ಕಳೆದ ಕೆಲವು ದಿನಗಳಿಂದ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಶಾಹೀನ್ ಮತ್ತು ಶ್ರೀಲಂಕಾ ಎ ನಡುವೆ ಸರಣಿ ನಡೆಯುತ್ತಿತ್ತು. ಆದರೆ ಹಿಂಸಾಚಾರದಿಂದಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ‘ಎ’ ಸರಣಿ ರದ್ದಾಗಿದ್ದು, ಪಾಕಿಸ್ತಾನ ಶಾಹೀನ್ ಮತ್ತು ಶ್ರೀಲಂಕಾ ಎ ನಡುವಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಸ್ವತಃ ಪಿಸಿಬಿ ಮಾಹಿತಿ ನೀಡಿದೆ.
ಇನ್ನು ಹಿಂದೊಮ್ಮೆ ಪಾಕಿಸ್ತಾನಕ್ಕೆ ತೆರಳಿದ್ದ ಶ್ರೀಲಂಕಾ ತಂಡದ ಮೇಲೆ ಉಗ್ರರ ದಾಳಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶ್ರೀಲಂಕಾ ತಂಡ ತವರಿಗೆ ವಾಪಸ್ ಬಂದಿದೆ. ಈ ಹಿನ್ನೆಲೆಯಲ್ಲಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಪಡೆದಿರುವ ಪಿಸಿಬಿ ಸಂಕಷ್ಟಕ್ಕೆ ಸಿಲುಕಿದೆ. ಒಂದು ಕಡೆ ಭಾರತ ತಂಡ ಪಾಕಿಸ್ತಾನಕ್ಕೆ ಬರುತ್ತಿಲ್ಲ, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸಿ ಎಂಬ ಒತ್ತಡ ಇದೆ. ಈಗ ಪಾಕಿಸ್ತಾನದಲ್ಲಿ ರಾಜಕೀಯ ಅಸ್ಥಿತರೆ ಉಂಟಾಗಿದ್ದು ಟೂರ್ನಿ ಆಯೋಜನೆಯ ಮೇಲೆಯೇ ಕರಿನೆರಳು ಬಿದ್ದಿದೆ.
ಇನ್ನು ಇದೇ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪಿಸಿಬಿ ಸಾಕಷ್ಟು ಟ್ರೋಲ್ ಆಗುತ್ತಿದೆ. ಒಂದು ಸಣ್ಣ ಸರಣಿಯನ್ನ ಆಯೋಜಿಸಲು ಸಾಧ್ಯವಾಗದಿದ್ದರು. 8 ದೊಡ್ಡ ತಂಡಗಳು ಭಾಗವಾಗುವ ದೊಡ್ಡ ಟೂರ್ನಮೆಂಟ್ ಹೇಗೆ ನಡೆಸುತ್ತೆ ಎಂದು ಪಿಸಿಬಿಯನ್ನು ಟ್ರೋಲ್ ಮಾಡಲಾಗುತ್ತಿದೆ.