ತುಮಕೂರು : ಸಚಿವ ಹೆಚ್ ಸಿ ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಹಾಗೂ ಪರಮೇಶ್ವರ್ ಪ್ರತ್ಯೇಕ ಭೇಟಿ ವಿಚಾರಕ್ಕೆ ಸಂಬಂಧಪಟ್ಟಂತೆ ತುಮಕೂರಲ್ಲಿ ದಸರಾ ಉದ್ಘಾಟನೆ ಕಾರ್ಯಕ್ರಮದ ಬಳಿಕ ಸಚಿವ ಗೃಹ ಸಚಿವ ಡಾ. ಪರಮೇಶ್ವರ್ ಮಾತನಾಡಿದ್ದು, ನಾವು ಯಾವುದು ಮೀಟಿಂಗ್ ಮಾಡಿಲ್ಲ, ಭೇಟಿಯಾಗಿದ್ದೇವೆ ಅಷ್ಟೇ. ಕಾಫಿ ಕುಡಿದಿದ್ದೇವೆ, ಊಟ ಮಾಡಿಲ್ಲ. ನಾವು ಮಹದೇವಪ್ಪ ಅವರ ಮನೆಗೆ ಹೋಗಿದ್ದೆವು. ಮುಖ್ಯಮಂತ್ರಿಗಳನ್ನು ಬೇರೆ ಬೇರೆ ವಿಚಾರದಲ್ಲಿ ಭೇಟಿಯಾಗಬೇಕಿತ್ತು. ಅದಕ್ಕಾಗಿ ಮಹದೇವಪ್ಪ ಅವರ ಮನೆಗೆ ಹೋಗಿದ್ದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ನಾನು ನಿಮ್ಮ ಮನೆಯ ಬಳಿ ಬರುತ್ತೇನೆ ಒಟ್ಟಿಗೆ ಹೋಗೋಣ ಸಿಎಂ ಭೇಟಿಗೆ ಅಂತ ಹೇಳಿದ್ದೆ. ಅಲ್ಲೇ ಪಕ್ಕದಲ್ಲಿ ಸತೀಶ್ ಜಾರಕಿಹೊಳಿ ಮನೆ ಇದೆ. ನಾನು ಬರುತ್ತೇನೆ ಎಂದು ಅವರು ಬಂದರು. ನಾವು ಮಾತನಾಡಿಕೊಂಡು ಚೀಫ್ ಮಿನಿಸ್ಟರ್ ಪವರ್ ಕಾರ್ಪೊರೇಷನ್ ನಲ್ಲಿ ಇದ್ದರು ಅಲ್ಲಿಗೆ ಹೋದೆವು. ಅದಕ್ಕೆ ಅರ್ಥೈಸುವ ಅಗತ್ಯತೆ ಇಲ್ಲ. ಸಿಎಂ ಸ್ಥಾನದ ಕುರಿತಾದ ಯಾವುದೇ ಚರ್ಚೆಗಳು ನಡೆದಿಲ್ಲ ಅಂತ ಕ್ಲಾರಿಫೈ ಮಾಡುತ್ತಿದ್ದೇನೆ. ನಾವು ಸಿಎಂ ಗೆ ಮಾರಲ್ ಆಗಿದ್ದೇವೆ, 136 ಶಾಸಕರು ಇದ್ದೇವೆ. ನಾವೆಲ್ಲ ಸಚಿವರು ಕೂಡ ಅವರ ಜೊತೆ ಇದ್ದೇವೆ. ಅದರಲ್ಲಿ ಎರಡು ಮಾತಿಲ್ಲ. ನಮ್ಮಲ್ಲಿ ಯಾರೂ ಬೇರೆ ಇದ್ದೇವೆ ಎಂದು ಹೇಳಿಲ್ಲವಲ್ಲ. ಕಾಫಿ ಕುಡಿಯಲು ಹೋದರೆ ಅದು ಸಭೆ ಆಗಲ್ಲ. ಒಬ್ಬರಿಬ್ಬರು ಹೋದರೆ ಅದು ಅದೇನು ವಿಶೇಷತೆ ಏನಲ್ಲ.ಕನಿಷ್ಠ ಒಂದು 10 ಜನನಾದ್ರೂ ಸೇರಿದ್ರೆ ಅದನ್ನ ನೀವು ಅರ್ಥೈಸಬಹುದು ಎಂದು ಹೇಳಿದ್ದಾರೆ.
ಮೂಲ ಮತ್ತು ವಲಸಿಗ ಕಾಂಗ್ರೆಸ್ ವಿಚಾರ- ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸುರೇಶ್ ಗೌಡ ಯಾರು, ಅವರೇನು ಕಾಂಗ್ರೆಸ್ ಪಕ್ಷದವರಾ ? ಬೆಂಕಿ ಹಚ್ಚುವ ಕೆಲಸ ಅವರದು. ಅದಕ್ಕೆ ಅವರು ಆ ರೀತಿ ಹೇಳಿದ್ದಾರೆ. ಸಿದ್ದರಾಮಯ್ಯ ಕಾಂಗ್ರೆಸ್ ಸೇರಿ ಎಷ್ಟು ವರ್ಷಗಳಾಯಿತು. ಎರಡು ಸರಿ ಸಿಎಂ ಆಗಿದ್ದಾರೆ, ಇನ್ನೂ ಹೊರಗಿನವರು ಆಗುತ್ತಾರೆ. ಅವರಿಗೆ ಅರ್ಥ ಆಗಿಲ್ಲ ಅಷ್ಟೆ ಎಂದು ಶಾಸಕ ಸುರೇಶ್ ಗೌಡಗೆ ಟಾಂಗ್ ಕೊಟ್ಟಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕುಮಾರಸ್ವಾಮಿ ವಿರುದ್ಧ FIR ಆಗಿದೆ. ಪೊಲೀಸರು ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತಾರೆ ಎಂದು ತುಮಕೂರಿನಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.