ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ದೀಪಿಕಾ ದಾಸ್ ತಾಯಿ ಪದ್ಮಲತಾಗೆ ಅಪರಿಚಿತನೊಬ್ಬ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಬಗ್ಗೆ ಬೆಂಗಳೂರು ಹೊರವಲಯದ ಮಾದನಾಯಕನಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿಗಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ದೂರಿನಲ್ಲೇನಿದೆ..?
ದೀಪಿಕಾ ದಾಸ್ ತಾಯಿ ಪದ್ಮಲತಾ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, ನಟಿಯಾಗಿರುವ ನನ್ನ ಮಗಳು 8 ತಿಂಗಳ ಹಿಂದೆ ದೀಪಕ್ ಎಂಬುವರ ಜೊತೆಗೆ ವಿವಾಹವಾಗಿದ್ದೂ, ಅಳಿಯ-ಮಗಳು ಕಳೆದ ಒಂದು ತಿಂಗಳ ಹಿಂದೆ ಇಂಗ್ಲೆಂಡ್ ಪ್ರವಾಸಕ್ಕೆ ಹೋಗಿದ್ದರು. ಆಗ ಅಪರಿಚಿತ ವ್ಯಕ್ತಿಯೊಬ್ಬ ನನಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಯಾಕೆ ಮದುವೆ ಮಾಡಿದ್ರಿ. ನಿಮ್ಮ ಅಳಿಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ ಜನರಿಗೆ ಮೋಸ ಮಾಡಿರುತ್ತಾನೆ ಎಂದಿದ್ದ. ನಾನು ಹಾಗೇನಾದ್ರು ಇದ್ರೆ ಕಾನೂನಾತ್ಮಕವಾಗಿ ದೂರು ನೀಡುವಂತೆ ಹೇಳಿದ್ದೆ. ಕೆಲವು ದಿನಗಳ ನಂತರ ನನ್ನ ಮಗಳು ದೀಪಿಕಾ ದಾಸ್ ಗೆ ಕರೆ ಮಾಡಿದ್ದ. ನಿಮ್ಮ ಯಾಜಮಾನರು ಅಕ್ರಮ ಚಟುವಟಿಕೆಗಳಿಂದ ಬಡಾವಣೆಗೆ ಮೋಸ ಮಾಡಿದ್ದು ನಿಮಗೆ ತಿಳಿದಿಲ್ಲವೆ. ನೀವು ಪುನಿತ್ ರಾಜ್ ಕುಮಾರ್ ಸಮಾಧಿ ಬಳಿ ಆಣೆ ಮಾಡಿ ಎಂದಿದ್ದ. ಆಗ, ಈ ಆರೋಪಗಳೆಲ್ಲ ಸುಳ್ಳು. ಇದಕ್ಕೆ ಪುನೀತ್ ರಾಜ್ ಕುಮಾರ್ ಹೆಸರು ತರಬೇಡಿ. ನೀವು ಕಾನೂನಾತ್ಮಕವಾಗಿ ದೂರು ನೀಡಿ ಎಂದಿದ್ದಳು. ಆಗ ಆತ ನೀವು ಹಣ ನೀಡಿ. ಇಲ್ಲವಾದರೆ ನಿಮ್ಮ ಹೆಸರಿಗೆ ಧಕ್ಕೆ ತರುತ್ತೇನೆ ಎಂದಿದ್ದ. ಅಲ್ಲದೇ ಹಣ ನೀಡದಿದ್ದರೆ ನಿಮ್ಮ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದ. ನನ್ನ ಮಗಳು ಮತ್ತು ಅಳಿಯನ ಹೆಸರು ಬಳಿಸಿಕೊಂಡು ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಿರುತ್ತಾನೆ. ಪದೇ ಪದೇ ಫೋನ್ ಮಾಡಿ ಹಣಕ್ಕೆ ಬೇಡಿಕೆ ಹಾಗೂ ಸಾಯೋದಾಗಿ ಬೆದರಿಕೆ ಹಾಕಿದ್ದ ಎಂದು, ಯಶವಂತ ಎಂಬಾತನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ, ಬಿಎನ್ಎಸ್ 308(2) ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ.
