ಮೈಕ್ರೋಫೈನಾನ್ಸ್ ಕುರಿತ ಸುಗ್ರೀವಾಜ್ಞೆ ಸ್ವರೂಪ ಬಗ್ಗೆ ಇನ್ನೆಡು ಮೂರು ದಿನಗಳಲ್ಲಿ ಅಂತಿಮಗೊಳಿಸಿ ನಂತರ ಸುಗ್ರೀವಾಜ್ಞೆ ಹೊರಡಿಸಲಾಗುತ್ತದೆ ಎಂದು ಗೃಹಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಪರಮೇಶ್ವರ್, ಯಾವಾಗ ಸುಗ್ರೀವಾಜ್ಞೆ ಹೊರಡಿಸಬೇಕು ಅಂತ ಸಮಯ ನಿಗದಿಗೊಳಿಸಿಲ್ಲ. ಜನರಿಗೆ ಕಿರುಕುಳ ಮಾಡ್ತಿರುವ ಘಟನೆಗಳು ನಡೀತಿವೆ, ಆತ್ಮಹತ್ಯೆ, ಊರು ಬಿಡುವ ಘಟನೆಗಳು ಆಗ್ತಿವೆ. ಇದು ನಿಲ್ಲಬೇಕು, ನೋಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೂ ಕಡಿವಾಣ ಹಾಕಬೇಕೆಂದು ತಿಳಿಸಿದ್ದಾರೆ.
ಇನ್ನೂ ನಮ್ಮ ಊರಿನಲ್ಲಿ ಎರಡೂವರೆ ಲಕ್ಷ ಕೊಟ್ಟು ನಾಲ್ಕೂವರೆ ಲಕ್ಷ ವಸೂಲು ಮಾಡಿದ್ದಾರೆ, ಆ ಮನೆಯವರು ಮನೆ ಬಿಟ್ಟು ಹೋಗಿದ್ದಾರೆ. ಇದು ನನ್ನ ಗಮನಕ್ಕೆ ಬಂದು ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸಿದ್ದೆ. ಈಗ ಆಮನೆಯವ್ರು ಬಂದಿದ್ದಾರೆ, ನಾನೀಗ ಅಲ್ಲಿಗೇ ಹೋಗ್ತಿದ್ದೇನೆ. ಕಾನೂನು ಮೂಲಕ ಕಿರುಕುಳ ನಿಯಂತ್ರಣ ಮಾಡೋದು ನಮ್ಮ ಉದ್ದೇಶ. ನಾವು ತರುವ ಕಾನೂನನ್ನು ಕೋರ್ಟಿನಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳು ಪ್ರಶ್ನೆ ಮಾಡದಂತೆ ರೂಪಿಸ್ತೇವೆ. ಬೇರೆ ರಾಜ್ಯಗಳ ಕಾನೂನು ಅಧ್ಯಯನ ಮಾಡಿ ಹೊಸ ಕಾನೂನು ತರ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.