ತುಮಕೂರು (ಆ.30): ತನಗೆ ಕುಡಿಯೋಕೆ ಹಣ ಕೊಟ್ಟಿಲ್ಲ ಎಂದು ಕುಡುಕನೊಬ್ಬ ವ್ಯಕ್ತಿಯ ಕುತ್ತಿಗೆ ಕೊಯ್ದ ಘಟನೆ ತುಮಕೂರು ನಗರದ ಸದಾಶಿವನಗರದ 4 ನೇ ಮುಖ್ಯರಸ್ತೆಯಲ್ಲಿ ನಡೆದಿದೆ.
ಚಿತ್ರದುರ್ಗ ಮೂಲದ ಹನುಮಂತ ಎಂಬಾತನಿಗೆ ಕುಡುಲ ಬ್ಲೇಡ್ ನಿಂದ ಕತ್ತು ಕೊಯ್ದು ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಹನುಮಂತ ತನ್ನ ಪತ್ನಿ ಮಕ್ಕಳೊಂದಿಗೆ, ದಿನಸಿ ಖರೀದಿಸಲು ಅಂಗಡಿಗೆ ಬಂದಿದ್ದ. ಈ ವೇಳೆ ರಸ್ತೆ ಬದಿ ನಿಂತಿದ್ದ ಪುಂಡನೊಬ್ಬ ಇವರ ಬಳಿ ಬಂದು ಕುಡಿಯಲು ಹಣ ಕೊಡಿ ಎಂದು ಕೇಳಿದ್ದಾನೆ. ಆಗ ಹಣ ಕೊಡಲು ಹನುಮಂತ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದು ಏಕಾಏಕಿ ಬ್ಲೇಡ್ನಿಂದ ಹನುಮಂತನ ಕುತ್ತಿಗೆ ಕೊಯ್ದು ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಹನುಮಂತ ಅವರ ಪತ್ನಿ ಸಾರ್ವಜನಿಕರ ಸಹಾಯದಿಂದ ಕುಡುಕನನ್ನು ಹಿಡಿದು ಚಪ್ಪಲಿಯಲ್ಲಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಗಾಯಾಳು ಹನುಮಂತ ಅವರಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.