ಬೆಂಗಳೂರು - ಮಳೆಯಿಂದ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡ ಹುರುಳಿ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಈ ಬೆನ್ನಲ್ಲೇ ಸದ್ಯ ನಗರದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಕಟ್ಟಡಗಳು ಬಿರುಕು ಬಿಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಕಟ್ಟಡಗಳ ಕೆಡವಲು ಪಾಲಿಕೆ ಇಂದು ಮುಂದಾಗಿದೆ.
ಶಕ್ತಿಗಣಪತಿ ನಗರ ವಾರ್ಡಿನ ಕಮಲನಗರದಲ್ಲಿ ಮೂರು ಅಂತಸ್ತಿನ ಬಿಲ್ಡಿಂಗ್ ಕುಸಿದಿದ್ದು, ವಿಷಯ ತಿಳಿದು ಶಾಸಕ ಕೆ ಗೋಪಾಲಯ್ಯ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಘಟನೆ ಮಾಹಿತಿ ಪಡೆದ ಬಳಿಕ ಕಟ್ಟಡ ನಿವಾಸಿಗಳನ್ನು ಹಾಗೂ ಮನೆಯಲ್ಲಿದ್ದ ಸಾಮಾನುಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಿಸಲಾಯಿತು. ಬಿಬಿಎಂಪಿ ಹಾಗೂ ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದೆ. ಇದೇ ಸಂದರ್ಭದಲ್ಲಿ ಮನೆಯ ಮಾಲೀಕ ತಿಮ್ಮಪ್ಪ ಮಾತನಾಡಿ, ಬಹಳ ಕಷ್ಟಪಟ್ಟು ಮನೆಯನ್ನು ನಿರ್ಮಾಣ ಮಾಡಿದ್ದೆ. ಮೋರಿ ನೀರು ಟ್ಯಾಂಕ್ ಗೆ ಟಚ್ ಆಗಿ ಈ ಅನಾಹುತ ಆಗಿದೆ. ಮನೆಯನ್ನು ಡೆಮಾಲಿಶ್ ಮಾಡುವುದಾಗಿ ತಿಳಿಸಿದ್ದಾರೆ. ಸಾಲ ಮಾಡಿ ಕಟ್ಟಿರುವ ಮನೆಗೆ ಇಂತಹ ಪರಿಸ್ಥಿತಿ ಬಂದಿರುವುದು ಬಹಳ ದುಃಖ ತಂದಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಮತ್ತೊಂದೆಡೆ ಮಹದೇವಪುರ ಹೊರವಲಯ ಹೊರಮಾವಿನ ನಂಜಪ್ಪ ಗಾರ್ಡನ್ ನ ಅನಧಿಕೃತ 6 ಅಂತಸ್ತಿನ ಕಟ್ಟಡ ತೆರವು ಕಾರ್ಯಚರಣೆ ನಡೆಯುತ್ತಿದೆ. ಈ ಕಟ್ಟಡದ ವಿಸ್ತೀರ್ಣವೂ 10-25ಅಡಿಯಲ್ಲಿ ನಿರ್ಮಿಸಲಾಗಿತು. ಇತ್ತಿಚೆಗೆ ಬಿರುಕು ಕಂಡ ಹಿನ್ನೆಲೆಯಲ್ಲಿ ಪಾಲಿಕೆ ಕಟ್ಟಡ ತೆರವು ಕಾರ್ಯ ಮುಂದುವರೆಸಿದೆ.