ಕರ್ನಾಟಕ

ಕೆರೆಗೆ ಇಳಿದ ಆನೆ, ಮೇಲೆ ಕುಳಿತಿದ್ದ ಕಾವಾಡಿಗ ಆಯ ತಪ್ಪಿ ಬಿದ್ದು ಸಾವು..!

ಮೈಸೂರು ಜಿಲ್ಲೆಯ ಹುಣಸೂರು ಮೂಲದ ಗೋಪಾಲ್ (20) ನೀರಿನಲ್ಲಿ ಮುಳುಗಿ ಮೃತಪಟ್ಟ ಕಾವಾಡಿಗ. 10 ವರ್ಷದ ಸಂಪತ್ ಹೆಸರಿನ ಆನೆಯನ್ನು 2 ವರ್ಷದಿಂದ ಗೋಪಾಲ್ ನೋಡಿಕೊಳ್ಳುತ್ತಿದ್ದ.

ಬೆಂಗಳೂರು: ಬನ್ನೇರುಘಟ್ಟದ ಜೈವಿಕ ಉದ್ಯಾನದ ಸಫಾರಿ ಮಾರ್ಗದ ಸೀಗೆಕಟ್ಟೆ ಕೆರೆಯಲ್ಲಿ ಆನೆ ಮೇಲೆ ಕುಳಿತು ಮೈತೊಳೆಯುವ ಸಂದರ್ಭದಲ್ಲಿ ಇದ್ದಕ್ಕಿದಂತೆ ಆನೆ ಆಳದ ನೀರಿನೊಳಗೆ ಇಳಿದ ಕಾರಣ ಆನೆ ಮೇಲೆ ಕುಳಿತಿದ್ದ ಯುವಕ ಆಯ ತಪ್ಪಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಮೈಸೂರು ಜಿಲ್ಲೆಯ ಹುಣಸೂರು ಮೂಲದ ಗೋಪಾಲ್ (20) ನೀರಿನಲ್ಲಿ ಮುಳುಗಿ ಮೃತಪಟ್ಟ ಕಾವಾಡಿಗ. 10 ವರ್ಷದ ಸಂಪತ್ ಹೆಸರಿನ ಆನೆಯನ್ನು 2 ವರ್ಷದಿಂದ ಗೋಪಾಲ್ ನೋಡಿಕೊಳ್ಳುತ್ತಿದ್ದ. 

ಬುಧವಾರ ಬೆಳಗ್ಗೆ 10.30ರ ಸುಮಾರಿಗೆ ಆನೆ ಮೈತೊಳೆಯುವ ಸಮಯದಲ್ಲಿ ಗಾಬರಿಗೊಂಡ ಆನೆ ಕೆರೆಯ ಒಳಭಾಗಕ್ಕೆ ಇಳಿದಿದೆ. ಈಜು ಬಾರದೆ ಆಳದ ನೀರಿನಲ್ಲಿ ಗೋಪಾಲ್ ಮುಳುಗುತ್ತಿರುವುದನ್ನು ಗಮನಿಸಿದ ಅಣ್ಣ ಕೃಷ್ಣಕುಮಾ‌ರ್, ಮಾವುತ ಸಂಜೇಶ್ ರಕ್ಷಿಸಲು ಹರಸಾಹಸ ಪಟ್ಟರೂ ಕ್ಷಣಮಾತ್ರದಲ್ಲಿ ಗೋಪಾಲ್ ನೀರು ಪಾಲಾಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯಪಾಲಕ ನಿರ್ದೇಶಕ ವಿಶಾಲ್ ಸೂರ್ಯಸೇನ್ ಬನ್ನೇರುಘಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ಆಗಮಿಸಿದ ಪೊಲೀಸರು, ಮುಳುಗು ತಜ್ಞರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ 3 ಘಂಟೆ ಕಾರ್ಯಾಚರಣೆ ನಡೆಸಿ ಯುವಕನ ಮೃತದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ರವಾನಿಸಿದರು.