ಮೈಸೂರು : ಬೆಳ್ಳಂಬೆಳಗ್ಗೆ ಮೈಸೂರು ತಾಲೂಕಿನ ಕೇರ್ಗಳ್ಳಿ ಗ್ರಾಮದಲ್ಲಿ ಜೆಸಿಬಿಗಳ ಘರ್ಜನೆ ಜೋರಾಗಿದ್ದು, ರಾಜಾಕಾಲುವೆ ಮೇಲೆ ನಿರ್ಮಾಣವಾಗಿದ್ದ ಕೊರಗಜ್ಜ ದೇವಸ್ಥಾನವನ್ನ ತೆರವುಗೊಳಿಸಲಾಗಿದೆ.
ಕೇರ್ಗಳ್ಳಿ ಗ್ರಾಮದ ಸ ನಂ. 60 ರಲ್ಲಿ ಹಾದುಹೋಗಿದ್ದ ರಾಜ ಕಾಲುವೆಯಲ್ಲಿ ಅಕ್ರಮ ಒತ್ತುವರಿ ಆಗಿದೆ ಎಂದು ಮೈಸೂರು ತಾಲೂಕು ಆಡಳಿತಕ್ಕೆ ದೂರು ನೀಡಲಾಗಿತ್ತು. ಈ ಸಂಬಂಧ ದಾಖಲೆಗಳನ್ನ ಪರಿಶೀಲಿಸಿದ ಉಪವಿಭಾಗಾಧಿಕಾರಿ ಕೆ.ರಕ್ಷಿತ್ ಒತ್ತುವರಿಯಾಗಿರುವ ಬಗ್ಗೆ ಖಚಿತಪಡಿಸಿಕೊಂಡು, ಒತ್ತುವರಿಯನ್ನ ತೆರುವುಗೊಳಿಸುವಂತೆ ಆದೇಶಿಸಿದ್ದಾರೆ.
ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ನೇತೃತ್ವದಲ್ಲಿ ಜಯಪುರ ಪೊಲೀಸರ ಭದ್ರತೆಯೊಂದಿಗೆ ಕಾರ್ಯಾಚರಣೆ ನಡೆಸಿ, ರಾಜಾಕಾಲುವೆಯನ್ನ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ ಕೊರಗಜ್ಜ ದೇವಾಲಯವನ್ನ ನೆಲಸಮಗೊಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಜಯಪುರ ಹೋಬಳಿ ಉಪತಹಸೀಲ್ದಾರ್ ನಿಂಗಪ್ಪ, ರಾಜಸ್ವ ನಿರೀಕ್ಷಕರಾದ ಲೋಹಿತ್, ಹೋಬಳಿಯ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಬೋಗಾದಿ ಪಟ್ಟ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ನಗರಮಾಪನ ಯೋಜನಾಧಿಕಾರಿಗಳ ಕಚೇರಿ ಸಿಬ್ಬಂದಿ ಸೇರಿ ಹಲವರು ಭಾಗಿಯಾಗಿದ್ದರು.