ದೇಶ

ಮಿಸ್ಟರ್‌ 360 ಮೇಲೆ ಆರ್‌ಸಿಬಿ ಕಣ್ಣು – ಯಾರು ಆ 360 ಇಲ್ಲಿದೆ ಮಾಹಿತಿ?

17 ಆವೃತ್ತಿ ಕಳೆದರೂ ಒಂದೇ ಒಂದು ಬಾರಿಯೂ ಕಪ್‌ ಗೆಲ್ಲದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಬಾರಿ ಟ್ರೋಫಿ ಎತ್ತಿಹಿಡಿಯುವುದಕ್ಕಾಗಿಯೇ ಬಲಿಷ್ಟ ತಂಡ ಕಟ್ಟಲು ಸಜ್ಜಾಗಿದೆ.

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಎಂದೇ ಗುರುತಿಸಿಕೊಂಡಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಈ ಬಾರಿ ಮಹತ್ವದ ಬದಲಾವಣೆ ಕಂಡುಬರುತ್ತಿದೆ.‌ 17 ಆವೃತ್ತಿ ಕಳೆದರೂ ಒಂದೇ ಒಂದು ಬಾರಿಯೂ ಕಪ್‌ ಗೆಲ್ಲದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಈ ಬಾರಿ ಟ್ರೋಫಿ ಎತ್ತಿಹಿಡಿಯುವುದಕ್ಕಾಗಿಯೇ ಬಲಿಷ್ಟ ತಂಡ ಕಟ್ಟಲು ಸಜ್ಜಾಗಿದೆ. ಅದಕ್ಕಾಗಿ ಮುಂಬೈ ಇಂಡಿಯನ್ಸ್‌ ತಂಡ ಸೂಪರ್‌ ಸ್ಟಾರ್‌ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್‌ ಮತ್ತು ಟಿಮ್‌ ಡೇವಿಡ್‌ ಅವರ ಮೇಲೆ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿವೆ.


ಈಗಾಗಲೇ ಬಿಸಿಸಿಐ (BCCI) 2025-27 ಐಪಿಎಲ್‌ ಆವೃತ್ತಿಗಳಿಗೆ ಸಂಬಂಧಿಸಿದಂತೆ ಹಲವು ನಿಯಮಗಳನ್ನು ಜಾರಿಗೊಳಿಸಿದೆ. ಈ ಬಾರಿ ಮೆಗಾ ಹರಾಜು ನಡೆಯುತ್ತಿರುವುದರಿಂದ 5 ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದೆ. ಅಲ್ಲದೇ ಒಂದು ಆರ್‌ಟಿಎಂ ಕಾರ್ಡ್‌ ಬಳಕೆಗೂ ಅಸ್ತು ಎಂದಿದೆ. ಹಾಗಾಗಿ ಈ ಬಾರಿ ಟ್ರೇಡ್‌ ಇನ್‌ ವಿಂಡೋ ಅಥವಾ ಆರ್‌ಟಿಎಂ ಕಾರ್ಡ್‌  ನಿಯಮದಲ್ಲಿ ಇಬ್ಬರು ಬ್ಯಾಟರ್‌ಗಳನ್ನು ತಂಡಕ್ಕೆ ಕರೆತರಲು ಆರ್‌ಸಿಬಿ ಪ್ಲ್ಯಾನ್‌ ಮಾಡಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಫ್ರಾಂಚೈಸಿಗಳು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. 

ಮುಂಬೈನಲ್ಲಿ ಸೂರ್ಯನ ಸಾಧನೆ:
2011ರಿಂದಲೂ ಮುಂಬೈ ಇಂಡಿಯನ್ಸ್‌ ತಂಡದಲ್ಲೇ ಇರುವ ಸೂರ್ಯಕುಮಾರ್‌ ಯಾದವ್‌ 150 ಪಂದ್ಯಗಳಲ್ಲಿ 3,594 ರನ್‌ ಗಳಿಸಿದ್ದಾರೆ. ಇದರಲ್ಲಿ 2 ಶತಕ, 24 ಅರ್ಧಶತಕ, 385 ಬೌಂಡರಿಗಳು ಹಾಗೂ 130 ಸಿಕ್ಸರ್‌ಗಳೂ ಸೇರಿವೆ. ಇನ್ನೂ ಈವರೆಗೆ 38 ಪಂದ್ಯಗಳನ್ನಾಡಿರುವ ಎಲೆಕ್ಟ್ರಿಕ್‌ ಸ್ಟ್ರೈಕರ್‌ ಟಿಮ್‌ ಡೇವಿಡ್‌ 659 ರನ್‌ಗಳನ್ನ ಗಳಿಸಿದ್ದಾರೆ. ಇದರಲ್ಲಿ 38 ಬೌಂಡರಿ, 46 ಸಿಕ್ಸರ್‌ಗಳು ಸೇರಿವೆ.

ಈಗಾಗಲೇ ಮುಂಬರುವ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಮಾಜಿ ನಾಯಕ ರೋಹಿತ್‌ ಶರ್ಮಾ ಆರ್‌ಸಿಬಿ ಸೇರಲಿದ್ದಾರೆ ಎಂಬ ವದಂತಿಗಳ ನಡುವೆ ಈ ಸುದ್ದಿ ಬಂದಿದೆ. ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ರಿಟೇನ್‌ ಆಟಗಾರರ ಪಟ್ಟಿಯನ್ನು ಅ.31ರ ಒಳಗೆ ಪ್ರಕಟಿಸುವಂತೆ ಬಿಸಿಸಿಐ ಡೆಡ್‌ಲೈನ್‌ ಫಿಕ್ಸ್‌ ಮಾಡಿದೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಭಾವ್ಯ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿವೆ ಎಂದು ಹೇಳಲಾಗುತ್ತಿವೆ.

ಟ್ರೇಡ್‌ ಇನ್‌ ವಿಂಡೋನಲ್ಲಿ ಬದಲಾವಣೆ ಸಾಧ್ಯತೆ:
ಸದ್ಯ ಮುಂಬೈ ಇಂಡಿಯನ್ಸ್‌ನ ರೋಹಿತ್‌ ಶರ್ಮಾ ಅವರು ರಿಟೇನ್‌ ಆಟಗಾರರ ಪಟ್ಟಿಯಲ್ಲಿದ್ದರೂ, ಅವರು ಟ್ರೇಡ್‌ ಇನ್‌ ವಿಂಡೋ ನಿಯಮದಲ್ಲಿ ಆರ್‌ಸಿಬಿ ಪಾಲಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಲಿ ಕ್ಯಾಪ್ಟನ್‌ ಫಾಫ್‌ ಡು ಪ್ಲೆಸಿಸ್‌ ರಿಟೇನ್‌ ಸಂಭಾವ್ಯ ಪಟ್ಟಿಯಲ್ಲಿ ಇಲ್ಲದಿರುವುದೂ ಇದಕ್ಕೆ ಕಾರಣವಾಗಿದೆ. 2024ರ ಆವೃತ್ತಿಯಲ್ಲಿ ಆಸೀಸ್‌ ಆಟಗಾರ ಕ್ಯಾಮರೂನ್‌ ಗ್ರೀನ್‌ ಮುಂಬೈ ಇಂಡಿಯನ್ಸ್‌ ಮತ್ತು ಹಾರ್ದಿಕ್‌ ಪಾಂಡ್ಯ ಗುಜರಾತ್‌ ಟೈಟಾನ್ಸ್‌ ತಂಡದಲ್ಲಿದ್ದರೂ ಅವರನ್ನು ಟ್ರೆಡ್‌ ಇನ್‌ ವಿಂಡೋ ನಿಯಮದ ಪ್ರಕಾರ ಬದಲಾವಣೆ ಮಾಡಿಕೊಳ್ಳಲಾಗಿತ್ತು. ಹಾರ್ದಿಕ್‌ ಪಾಂಡ್ಯ ಅವರನ್ನು ಗುಜರಾತ್‌ ಟೈಟಾನ್ಸ್‌ಗೆ ಕರೆತಂದು, ಗ್ರೀನ್‌ ಅವರನ್ನ ಆರ್‌ಸಿಬಿ ತಂಡಕ್ಕೆ ಬಿಟ್ಟುಕೊಡಲಾಗಿತ್ತು.