ದೇಶ

ಸ್ನೆಹಿತರ ಜೊತೆ ಸೇರಿ ಹೆತ್ತಮ್ಮನ್ನನ್ನೇ ಕೊಂದ ಪಾಪಿ ಮಗ..!

ಸುಧೀರ್ ಡಿಜೆ ಮಿಕ್ಸರ್ ರಿಪೇರಿ ಮಾಡಲು ತಾಯಿಯ ಬಳಿ 20,000 ರೂ. ಹಣ ಕೇಳಿದ್ದ. ಆದರೆ ಮಹಿಳೆ ಹಣ ನೀಡಲು ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಆಕೆಯ ಮಗ ಮತ್ತು ಆತನ ಸ್ನೇಹಿತರು ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನವದೆಹಲಿ : ಪಾಪಿ ಮಗನೊಬ್ಬ ಡಿಜೆ ರಿಪೇರಿಮಾಡಲು ಹಣ ಕೊಡಲಿಲ್ಲವೆಂದು ಹೆತ್ತ ತಾಯಿಯನ್ನೇ ಕೊಲೆ ಮಾಡಿದ ದುರ್ಘಟನೆಯೊಂದು ಗಾಜಿಯಾಬಾದ್ ನಲ್ಲಿ ನಡೆದಿದೆ. ಮಹಿಳೆಯೊಬ್ಬಳ ಶವ ಪತ್ತೆಯಾದ ಸುಮಾರು ಮೂರು ವಾರಗಳ ನಂತರ, ಆಕೆಯ ಮಗ ಮತ್ತು ಆತನ ಇಬ್ಬರು ಸ್ನೇಹಿತರನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ ಆ ವೇಳೆ ಕೊಲೆ ಮಾಡಿರುವುದು ಪತ್ತೆಯಾಗಿದೆ.

ಹತ್ಯೆಗೀಡಾದ ಮಹಿಳೆಯನ್ನು ಸಂಗೀತಾ ತ್ಯಾಗಿ (47) ಎಂದು ಗುರುತಿಸಲಾಗಿದೆ. ಮಹಿಳೆಯ ಮೃತದೇಹ ಅ. 4 ರಂದು ಬೆಳಿಗ್ಗೆ ಗಾಜಿಯಾಬಾದ್‌ ನ ಟ್ರೋನಿಕಾ ಸಿಟಿ ಪ್ರದೇಶದಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಕೊಲೆಯಾದ ಮಹಿಳೆಯ ಪುತ್ರ ಸುಧೀರ್‌ ಹಾಗೂ ಆತನ ಇಬ್ಬರು ಸ್ನೇಹಿತರಾದ ಅಂಕಿತ್ ಮತ್ತು ಸಚಿನ್ ಎಂಬವರನ್ನು ಬಂಧಿಸಿದ್ದಾರೆ. ಸುಧೀರ್ ಡಿಜೆ ಮಿಕ್ಸರ್ ರಿಪೇರಿ ಮಾಡಲು ತಾಯಿಯ ಬಳಿ 20,000 ರೂ. ಹಣ ಕೇಳಿದ್ದ. ಆದರೆ ಮಹಿಳೆ ಹಣ ನೀಡಲು ನಿರಾಕರಿಸಿದ್ದಳು. ಇದೇ ಕಾರಣಕ್ಕೆ ಆಕೆಯ ಮಗ ಮತ್ತು ಆತನ ಸ್ನೇಹಿತರು ಸೇರಿಕೊಂಡು ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ಮದ್ಯ ವ್ಯಸನಿಯಾಗಿದ್ದ. ಆತ ಸಮಾರಂಭಗಳಲ್ಲಿ ಡಿಜೆ ನಿರ್ವಾಕನಾಗಿ ಕೆಲಸ ಮಾಡುತ್ತಿದ್ದ. ಆತನ ತಾಯಿ ಸಣ್ಣ ಬಟ್ಟೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಅ.3ರ ರಾತ್ರಿ ಸಂಗೀತಾ ಅವರನ್ನು ಬೈಕ್‌ ನಲ್ಲಿ ಹತ್ತಿಸಿಕೊಂಡು ಗೆಳೆಯರಾದ ಅಂಕಿತ್ ಹಾಗೂ ಸಚಿನ್ ಕಾಯುತ್ತಿದ್ದ ಜಾಗಕ್ಕೆ ಸುಧೀರ್ ತೆರಳಿದ್ದ. ಅಲ್ಲಿ ಆಕೆಯ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದರು. ಬಳಿಕ ಟ್ರೋನಿಕಾ ಸಿಟಿ ಪ್ರದೇಶದಲ್ಲಿ ಶವವನ್ನು ಎಸೆದು ಪರಾರಿಯಾಗಿದ್ದರು. ಈ ದೃಶ್ಯ ಸಿಸಿಟಿವಿಯಲ್ಲಿ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.