ಬೆಂಗಳೂರು : ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಕುರಿತು ಯುವ ಜನತಾದಳ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನಿಡಿದ್ದು, ಅಧಿಕಾರ ಎಲ್ಲಿ ಸಿಗುತ್ತದೆಯೋ ಯೋಗೇಶ್ವರ್ ಅಲ್ಲಿಗೆ ಹೋಗ್ತಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಯೋಗೇಶ್ವರ್ ಅವರಿಗೆ 25 ವರ್ಷ ರಾಜಕೀಯ ಅನುಭವವಿದೆ. ಅವರು ಒಂದು ಕಮಿಟ್ಮೆಂಟ್ ಇಟ್ಟುಕೊಂಡು ರಾಜಕೀಯ ಮಾಡಿಲ್ಲ. ಎಲ್ಲಿ ಅಧಿಕಾರ ಸಿಗುತ್ತೋ ಅಲ್ಲಿಗೆ ಜಂಪ್ ಆಗ್ತಾರೆ. ನಮ್ಮಿಂದ ಯಾವುದೇ ತಪ್ಪು ಆಗಿಲ್ಲ. ಜೆಡಿಎಸ್ ಪಕ್ಷದಲ್ಲೇ ಅವರು ಸ್ಪರ್ಧೆ ಮಾಡಬಹುದಿತ್ತು. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಜತೆ ಚರ್ಚೆ ಮಾಡಬಹುದಿತ್ತು. ಕಳೆದ ಎರಡು ತಿಂಗಳಿಂದ ಯೋಗೇಶ್ವರ್ ಕಾಂಗ್ರೆಸ್ ಅವರ ಜತೆ ಸಂಪರ್ಕದಲಿದ್ದರು. ರಾಜಕಾರಣವನ್ನು ಅಳೆದುತೂಗಿ ಮಾಡುವ ಬುದ್ದಿಜೀವಿಗಳಿಗೆ ಮುಂದಿನ ಜೀವನ ಹೇಗಿರುತ್ತದೆ ಎಂದು ಅವರಿಗೆ ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ ಬಳಿ 136 ಶಾಸಕರಿದ್ದಾರೆ. ಹೆಸರಿಗೆ ರಾಷ್ಟ್ರೀಯ ಪಕ್ಷ. ಆದರೆ ಅವರ ಬಳಿ ಅಭ್ಯರ್ಥಿ ಇಲ್ಲ. ಆಪರೇಶನ್ ಹಸ್ತ ಮಾಡಿದರು. ಬಿಜೆಪಿ ಅಭ್ಯರ್ಥಿಯನ್ನೇ ಹೈಜಾಕ್ ಮಾಡಿದ್ದಾರೆ. ಉಪ ಮುಖ್ಯಮಂತ್ರಿ ಸಹೋದರ ಡಿ.ಕೆ.ಸುರೇಶ್ ಅವರ ಸ್ಪರ್ಧೆ ಮಾಡುತ್ತಾರೆ ಎಂದು ಕಥೆ ಕಟ್ಟಲಾಯಿತು. ಈಗ ಯೋಗೇಶ್ವರ್ ಅವರಿಗೆ ಮಣೆ ಹಾಕಿರುವುದು ಆ ಪಕ್ಷ ದುಸ್ಥಿತಿಗೆ ಹಿಡಿದ ಕನ್ನಡಿ ಎಂದು ನಿಖಿಲ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಡಿ.ಕೆ. ಸುರೇಶ್ ಧೈರ್ಯ ಮಾಡಲಿಲ್ಲ, ಯಾಕೆ ಕಳೆದ ಲೋಕಸಭೆ ಚುನಾವಣೆಯ ಸೋಲಿನ ಬಳಿಕ ಸಚಿವರೂ ಸೇರಿದಂತೆ ಡಿ.ಕೆ ಶಿವಕುಮಾರ್ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ಯಾಕೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಧೈರ್ಯ ಮಾಡಲಿಲ್ಲ? ಡಿ.ಕೆ.ಸುರೇಶ್ ನಿಲ್ಲುವ ಧೈರ್ಯ ಪ್ರದರ್ಶನ ಮಾಡಲಿಲ್ಲ ಯಾಕೆ? ಆದರೆ, ಹೊರಗಿನಿಂದ ಹೈಜಾಕ್ ಮಾಡಿ ಅಭ್ಯರ್ಥಿ ಮಾಡ್ತಿದ್ದಾರೆ ಯಾಕೆ? ಎಂದು ನಿಖಿಲ್ ಪ್ರಶ್ನಿಸಿದರು.